ಮಾತಿನ ಮಾಣಿಕ್ಯಗಳಿಗೆ ಮುದ್ದಣ ಪುರಸ್ಕಾರ
ಲೇಖಕರು : ಉದಯವಾಣಿ
ಶನಿವಾರ, ಜೂನ್ 29 , 2013
|
ಕಲೆಗಾಗಿ ದುಡಿಯುತ್ತಿರುವ ಈರ್ವರು ಕಲಾ ಸೇವಕರಿಗೆ ಈ ಬಾರಿಯ ಮುದ್ದಣ ಪುರಸ್ಕಾರ - 2013 ನೀಡಿ ಗೌರವಿಸಲಾಗುತ್ತಿದೆ. ಆ ಈರ್ವರು ಸಾಧಕರ ಕಿರು ಪರಿಚಯ ಇಲ್ಲಿದೆ.
ಡಾ| ಎಂ. ಪ್ರಭಾಕರ ಜೋಶಿ
ಕಾರ್ಕಳ ತಾಲೂಕಿನ ಮಾಳದಲ್ಲಿ ಕಲೆ -ಸಾಹಿತ್ಯ ಹಿನ್ನೆಲೆ ಇರುವ ಕುಟುಂಬದಲ್ಲಿ ಜನಿಸಿದ ಪ್ರಭಾಕರ ಜೋಶಿ, ವಿದ್ಯಾರ್ಥಿ ದೆಸೆಯಿಂದಲೇ ಸಾಂಸ್ಕೃತಿಕವಾಗಿ ತನ್ನನ್ನು ತೊಡಗಿಸಿಕೊಂಡರು. ಹಲವು ಭಾಷೆಗಳಲ್ಲಿನ ಅವರ ತಿಳಿವು ಹತ್ತು ಹಲವು ಮುಖಗಳಲ್ಲಿ ಸಾಧನೆಯ ಹರಿವನ್ನು ಹರಿಸಲು ಅವರಿಗೆ ಸಾಧ್ಯವಾಗಿಸಿತು. ಮಂಗಳೂರಿನ ಬೆಸೆಂಟ್ ಪ.ಪೂ. ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕನಾಗಿ, ಪ್ರಾಂಶುಪಾಲರಾಗಿ ಜ್ಞಾನದಾಹಿ ವಿದ್ಯಾರ್ಥಿಗಳಿಗೆ ಕೊರಳಾದರು. ಯಕ್ಷಗಾನ, ಸಾಹಿತ್ಯ, ಸಂಸ್ಕೃತಿ, ತತ್ವಶಾಸ್ತ್ರ, ಶಿಕ್ಷಣ, ಸಮಾಜ ಕಾರ್ಯ, ಕ್ರೀಡೆ, ಸಂಘಟನೆ ಎಲ್ಲ ಕ್ಷೇತ್ರಗಳಲ್ಲೂ ಹಲವರೊಂದಿಗೆ ಒಬ್ಬರಾಗದೆ ಮೊದಲಿಗ ರಾಗುವ ಸೃಜನಶೀಲ ಸಾಮರ್ಥ್ಯವುಳ್ಳ ಸಾಧಕರು - ಶೋಧಕರು.
ಯಕ್ಷಗಾನ ತಾಳಮದ್ದಲೆ ರಂಗದ ಅರ್ಥಧಾರಿಯಾಗಿ ಎಲ್ಲ ಬಗೆಯ ಪಾತ್ರಗಳ ನಿರ್ವಹಣೆ, ಚಿಂತನಶೀಲ, ಮೊನಚಾದ, ಭಾವ -ವಿಚಾರಯುಕ್ತ ಅರ್ಥಗಾರಿಕೆ, ಕಲಾವಿದರೊಂದಿಗೆ ಹೊಂದಾಣಿಕೆ, ಅರ್ಥಗಾರಿಕೆಯಲ್ಲಿ ಸಾಂಸ್ಕೃತಿಕ, ಸಾಹಿತ್ಯ ಚಿಂತನ, ಚುರುಕುತನದ ಮೂಲಕ ಪ್ರಸಿದ್ಧಿ ಪಡೆದವರು. ಶಿಕ್ಷಣ, ಕಲೆ, ತಣ್ತೀಶಾಸ್ತ್ರ, ಸಾಂಸ್ಕೃತಿಕ ವಿಚಾರಗಳಲ್ಲಿ ಉಪನ್ಯಾಸಕಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಯಕ್ಷಗಾನ ವಿಮರ್ಶಕರಾಗಿ, ಕಲೆಯ ಪ್ರಾಯೋಗಿಕ ಜ್ಞಾನ, ತಾತ್ವಿಕ ಅರಿವು, ಕಲಾವಿಮರ್ಶೆಯ ಭದ್ರ ಬುನಾದಿಗಳಿರುವಂತಹ ಚಿಂತನೆ ಗಳಿಂದ ಯಕ್ಷಗಾನ ವಿಮರ್ಶೆಗೆ ಅಕಾಡೆಮಿಕ್ ರೂಪವನ್ನು ನೀಡುವಲ್ಲಿ ಅವರ ಪರಿಶ್ರಮವು ವಿಶಿಷ್ಟ ಸಾಧನೆ. ಜೋಶಿಯವರ ಮಾತಿನ ರೀತಿ ಅಸಾಧಾರಣವಾದದ್ದು. ಅವರ ಭಿನ್ನ ನಿರ್ವಹಣೆಯ ತಾಳಮದ್ದಳೆಯ ಅರ್ಥಗಾರಿಕೆ ಕಲಾಸಕ್ತರಿಗೊಂದು ಕಾವ್ಯ.
ಅಂಬಾತನಯ ಮುದ್ರಾಡಿ
ಉಡುಪಿ ಜಿಲ್ಲೆಯ ಮುದ್ರಾಡಿಯಲ್ಲಿ ಜನಿಸಿ, ಬಡತನವನ್ನು ಸವಾಲಾಗಿ ಸ್ವೀಕರಿಸಿ, ನಿರಂತರ ತಪಸ್ಯೆಯಿಂದ ವಾಗ್ದೇವಿಯನ್ನು ಒಲಿಸಿ ಕೊಂಡ ಅಂಬಾತನಯ ಮುದ್ರಾಡಿ ಛಲ ವಾದಿಯಾಗಿ, ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ತೋರಿಸಿಕೊಟ್ಟ ಧೀಮಂತರು. ಸುದೀರ್ಘ ಕಾಲ ಶಿಕ್ಷಕನಾಗಿ ಶಿಷ್ಯಕೋಟಿಗಳನ್ನು ಜ್ಞಾನಾಂಬುಧಿಯಲ್ಲಿ ಮಡಿಯಾಗಿಸಿದರು. ಶಿಕ್ಷಕ ವೃತ್ತಿಯ ನಡುವೆಯೇ ಕನ್ನಡ ತೇರನ್ನೆಳೆಯುತ್ತಾ ಸಾಹಿತ್ಯ ಕೃಷಿಯ ಮೂಲಕ ಅಮೃತ ಫಲವನ್ನು ಕೊಟ್ಟವರು. ಇವರ ಶಿಶುಗೀತೆಗಳು, ಕವನ ಸಂಕಲನ, ಏಕಾಂಕ ನಾಟಕ, ಭಕ್ತಿಗೀತೆ ಗಳು, ಚತುರ್ದಶಪದಿ, ವಿಡಂಬನ ಗೀತೆಗಳು, ಪ್ರೇಮಗೀತೆಗಳು, ನಾಟಕ ಗಳು, ನೃತ್ಯರೂಪಕಗಳು ಎಲ್ಲವೂ ಕಟ್ಟಿದರೆ ಕಬ್ಬು ಹಿಂಡಿದರೆ ಜೇನು.
ಯಕ್ಷಗಾನ ಕ್ಷೇತ್ರಕ್ಕೆ ಮುದ್ರಾಡಿಯವರದು ಅನನ್ಯ ಕೊಡುಗೆ. ಈ ಕ್ಷೇತ್ರದ ದಿಗ್ಗಜರಾದ ಡಾ| ಶೇಣಿ, ಸಾಮಗ, ಪೆರ್ಲ, ಡಾ| ಜೋಶಿ, ಮೂಡಂಬೈಲು, ಕುಂಬಳೆ ಮೊದಲಾದವರ ಜತೆ ಅರ್ಥಧಾರಿಯಾಗಿ ಪ್ರಸಿದ್ಧರು. ಕಿರಿಯ ಕಲಾವಿದರಿಗೆ ಪ್ರೋತ್ಸಾಹವನ್ನು ಕೊಡುವ ವಿಶಾಲ ಹೃದಯವುಳ್ಳವರು. ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಗೆಜ್ಜೆ ಕಟ್ಟಿ ತಮ್ಮ ಸರಳ ಸುಂದರ ಅರ್ಥ ನಿರೂಪಣೆಯಿಂದ ಪ್ರೇಕ್ಷಕರನ್ನು ತನ್ಮಯಗೊಳಿಸಿದ ಧನ್ಯರು. ಅನೇಕ ಯಕ್ಷಗಾನ ಕೃತಿಗಳನ್ನು ರಚಿಸಿದ, ಪ್ರತಿಭಾ ಸಂಪನ್ನರು. ತುಳುಭಾಷೆ ಕಂಡ ಶ್ರೇಷ್ಠ ವಾಗ್ಮಿಗಳಲ್ಲಿ ಓರ್ವರು.
ಸಾಹಿತ್ಯ ಕ್ಷೇತ್ರ ಕಂಡ ಶ್ರೇಷ್ಠ ಕವಿಗಳಲ್ಲಿ ಓರ್ವರಾದ ನಂದಳಿಕೆ ಲಕ್ಷ್ಮೀನಾರಾಯಣಯ್ಯನ (ಮುದ್ದಣ) ಹೆಸರಿನಲ್ಲಿ ಕೊಡಮಾಡುವ ಮುದ್ದಣ ಪುರಸ್ಕಾರವನ್ನು ಈ ಈರ್ವರು ಕಲಾವಿದರಿಗೆ ಜು.5, 2013ರಂದು ಸುರತ್ಕಲ್ ಮಹಮ್ಮಾಯಿ ದೇವಳದಲ್ಲಿ ನೀಡಿ ಗೌರವಿಸಲಾಗುತ್ತದೆ.
ಕೃಪೆ : http://www.udayavani.com
|
|
|